ಅಳಲು-ನೆಳಲು
ಕಣ್ಣು ತೆರೆದಾಗ ಸುತ್ತಲೂ ಕತ್ತಲು ; ಮೈಯೆಲ್ಲ ಬಾಸುಂಡೆ ಬಂದು ಊದಿಕೊಂಡಿತ್ತು ; ಉರಿಯುತ್ತಿತ್ತು.
ಒಂದು ಚೂರು ಅಲುಗಾಡಲು ಆಗದವರಂತೆ ಬಿದ್ದಿದ್ದೆ. ಮೈಯಲ್ಲಿನ ತ್ರಾಣವೆಲ್ಲ ಹೋಗಿತ್ತು. ಪ್ರಾಣವೊಂದೆ ಬಾಕಿಯಿತ್ತು. ಅದನ್ನು ಆ ಕಟುಕರು ಬಿಡಲೊಲ್ಲರು ಎಂದು ನನಗೆ ತಿಳಿದುಹೋಗಿತ್ತು. ಇನ್ನೇನಿದ್ದರೂ ಮೂಕಳಾಗಿ ಸಾವಿನ ಮನೆಕಡೆಗೆ ಪಯಣಿಸುವುಂತು ನಿಶ್ಚಿತ !. ಅಯ್ಯೋ ನನಗೇಕೆ ಇಂತಹ ಗತಿ ಬಂತು ?? ಓ ದೇವರೇ ನಾನೇನು ತಪ್ಪುಮಾಡಿದೆ?? ನನ್ನ ಯಜಮಾನೋ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ ; ಮುದ್ದಿಸುತ್ತಿದ್ದ. ಆದರೆ..... ಅದು ಅಂದು. ಈಗ ನಾನ್ಯಾರಿಗೂ ಬೇಡದಿರುವ ಮುದಿ ಪ್ರಾಣಿ. ನನ್ನದೆಲ್ಲವನ್ನು ಆತನಿಗೆ ನೀಡಿದೆ. ಆತನನ್ನು ನನ್ನ ಮಗನೆಂದೇ ಭಾವಿಸಿದೆ. ಪ್ರೀತಿಯಿಂದ ಅಮೃತವನ್ನೇ ನೀಡಿದೆ. ಆದರವನು...... ಈ ಮುದಿವಯಸ್ಸಿನಲ್ಲಿ ಘೋರವಿಷವನ್ನೇ ನೀಡಿದ. ಅಯ್ಯೋ !! ನನ್ನೀ ಅವಸ್ಥೆಗೆ ವಿಧಿಯನ್ನು ಹಳಿಯಲೇ?? ಅಥವಾ ಆತನನ್ನು ಹಳಿಯಲೇ?? ಇಲ್ಲಾ..... ಈ ಭೂಮಿಯಲ್ಲಿ ಹುಟ್ಟಿ ಬಂದ ನನ್ನ ಕರ್ಮವೆಂದು ಭಾವಿಸಲೇ ??
ಇಲ್ಲ ಈ ಯಜಮಾನನೇನೋ ಒಳ್ಳೆಯವನೇ.ಪಾಪ..... ಆತನಾದರೂ ಈ ನಿಷ್ಪ್ರಯೋಜಕಳನ್ನು ಇಟ್ಟುಕೊಂಡು ಏನು ಮಾಡಿಯಾನು ? ಸುಮ್ಮನೆ, ಕೂಳು ದಂಡ ! ಅಲ್ಲದೇ ಆತನ ಆರ್ಥಿಕಸ್ಥಿತಿ ಚೆನ್ನಾಗಿಲ್ಲವೆಂದು ಆತನ ಮಾತಿನ ಮೂಲಕ ತಿಳಿದುಕೊಂಡೆ ಪಾಪ....! ಹಳೇ ಮನೆ ಅದರ ರಿಪೇರಿ ಖರ್ಚು, ಮಗನ ಬೈಕು.... ಹೀಗೆ ಒಂದೇ .... ಎರಡೇ...... ನಾನು.ಆತನನ್ನು ಹಳಿದು ಉಪಯೋಗವಿಲ್ಲ, ಎಷ್ಟಾದರೂ ನಾನಿದ್ದಷ್ಟು ದಿನ ನನ್ನನ್ನು ಪ್ರೀತಿಸಿದ್ದಾನೆ ! ಹೊಟ್ಟಗೆ ಕೂಳು, ನೀರು ನೀಡಿ ಸಲಹಿದ್ದಾನೆ.
ಪ್ರತಿಯಾಗಿ ನಾನು ನನ್ನ ಸರ್ವಸ್ವವನ್ನೂ ಆತನಿಗೆ ಧಾರೆಯೆರೆದಿದ್ದೇನೆ, ಆತನ ಮಡದಿ ಮಕ್ಕಳ ಮೇಲೆವಹರಿಹಾಯದೆ, ಪ್ರೀತಿ ತೋರಿದ್ದೇನೆ.ಆತನ ಮಡದಿಯಂತೂ ನನ್ನನ್ನು ಪೂಜಿಸುತ್ತಿದ್ದಳು, ನಿಜ..... ನನ್ನನ್ನು ಕಳುಹಿಸುವಾಗ ಅವರೆಲ್ಲರ ಕಣ್ಣಂಚು ಒದ್ದೆಯಾದದ್ದನ್ನು ನಾನು ಗಮನಿಸಿದ್ದೇನೆ. ಅದು ಈಗಲೂ ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆತನ ಮಡದಿ, ಮಗಳು ಇಬ್ಬರೂ ಮೈ ಸವರಿ, ಅಪ್ಪಿ ಕಣ್ಣೀರಿನ ಅಭಿಷೇಕವನ್ನೇ ಮಾಡಿಬಿಟ್ಟರು.ಆಗ ನನ್ನ ಕಣ್ಣೀರು ಇವರಿಗೆ ಕಾಣಿಸದೇ ಇದ್ದಿರದು.
... ನೋವು..... ಸಹಿಸಲಸಾಧ್ಯ ಈ ನೋವು.. ಕೈ ಕಾಲುಗಳ ಮೂಳೆಗಳನ್ನು ಲಟಲಟನೆ ಮುರಿದು ಬಿಟ್ಟಿದ್ದಾರೆ . ಬಡಿದೂ.... ಬಡಿದೂ ಅಮ್ಮಾ..... ನನ್ನನ್ನು ಕಾಪಾಡಲೂ ನೀನಾದರೂ ಬರಬಾರದೇ ಅಮ್ಮಾ.... ಈ ಮಗಳ ಆರ್ತನಾದ ಕೇಳದೇ ಅಮ್ಮಾ.... ನಾನೇಕೆ ಗೋವಾಗಿ ಹುಟ್ಟದನೇನೋ??? ಅಮ್ಮ... ಕಟುಕರ ಕೈ ಸೇರಿ ನರಳುತ್ತಿದ್ದೇನೆ. ಆತನ ಮಡದಿ ನನ್ನನ್ನು ದೇವರಂತೆ ಪೂಜಿಸುತ್ತಿದ್ದಳು, ಆರಾಧಿಸುತ್ತಿದ್ದಳು. ಆದರೆ ಇವರು ಕೇವಲ ಕಸಕ್ಕಿಂತ ಕಡೆಯಾಗಿ ಭಾವಿಸಿರುವರಲ್ಲ.... ಅಯ್ಯೋ ತಾಯಿ... ಸಾಕು ನನಗೀ ಜನ್ಮ..... ಆ ಕಟುಕರು ನನ್ನನ್ನು ಕೊಲ್ಲುವ ಮುಂಚೆಯೆ ನೀನೆ ನನಗೆ ಈ ನರಕದಿಂದ ಮುಕ್ತಿ ನೀಡು.ನನ್ನಂತೆ ಬೇರೆ ಯಾವ ಗೋವು ನರಳಬಾರದು. ನನ್ನ ಶತ್ರುವಿಗೂ ಬೇಡ ಈ ಕಾಟ.ಆ ನನ್ನ ಅಕ್ಕ ಪುಣ್ಯಕೋಟಿಯನ್ನು ತಿನ್ನದೆ ಉಳಿಸಿ ಪ್ರಾಣಬಿಟ್ಟ ಆ ವ್ಯಾಘ್ರನೂ ಈ ಕಟುಕನಿಗಿಂತ ಎಷ್ಟೋ ಒಳ್ಳೆಯವನು. ಅಯ್ಯೋ...... ಅಮ್ಮಾ...... ಮಾ......
ಮುದಿಹಸುವೊಂದರ ಆರ್ತನಾದ ದಿಗಂತದಲ್ಲಿ ಲೀನವಾಯಿತೇ ಹೊರತು ಪ್ರಯೋಜನವಾಗಲಿಲ್ಲ. ಕೇಳದೇ ನಿಮಾಗಾರಿಗೂ ಈ " ಕಾಮಧೇನು"ವಿನ ಅಳಲು..... ??
ನೊರೆಹಾಲನ್ನು ಹೀರಿ ತಂಪಾದ ನಿಮ್ಮೊಡಲು ಅರಿಯದಾಯಿತೇ ಈ ಕರುಳಿನ ಕೂಗನ್ನು.......?? ಓ ಕಂದಮ್ಮಗಳಿರಾ...... ಅಕ್ಕಂದಿರಾ...... ಅಣ್ಣಂದಿರಾ....ಕಣ್ತೆರೆದೊಮ್ಮೆ ನೋಡಿ.....ನಮ್ಮ ತಾಯಿಯನ್ನು ನಮ್ಮಿಂದ ರಕ್ಷಿಸಲಾಗದೇ.....???ಕಟುಕರ ಕೈಯಂದ ಕಾಪಾಡಲಾಗದೇ.... ನಮ್ಮ.... ನಿಮ್ಮ ಗೋಮಾತೆಯನ್ನು??? ಎಲ್ಲಿರುವಿರಿ ?? ಹೀಗೆ ಬನ್ನಿ... ನಮ್ಮ ಶ್ರೀ ಚರಣದ ಅಡಿದಾವರೆಗಳಲ್ಲಿ ಇಂದೇ..... ಈ ಕ್ಷಣವೇ... ಪ್ರತಿಜ್ಞಾಬಧ್ದರಾಗೋಣ......
|| ವಂದೇ ಗೋಮಾತರಂ ||
ಗೋವಿಗಾಗಿ ಜೀವ
ಗೋವಿಗಾಗಿ ಭಾವ
ರಚನೆ :- ಶ್ರುತಿ. ಯು
ಅಳಲು-ನೆಳಲು
Reviewed by Unknown
on
22:04:00
Rating:
No comments: