New Posts

recent

ಗೋಪಾಲನ ಜೊತೆಯಲ್ಲಿ...!!

ಎಂದಿನಂತೆ ಮಾಧವ ಮನೆಯ ಮುಂದಿನ ಅಂಗಳದಲ್ಲಿ ಒಬ್ಬನೇ ಆಟವಾಡುತ್ತಿದ್ದ. ತಕ್ಷಣ ಆತನಿಗೆ ಗೆಳೆಯ ಕೃಷ್ಣನ ನೆನಪಾಯಿತು. ಕರೆದ ಕೂಡಲೆ ಬರುವೆ ಅಂತ ಅಂದಿದ್ದ ಕೃಷ್ಣ. ನೋಡೇ ಬಿಡೋಣ ಅಂತ ‘ಕೃಷ್ಣಾ’ ಅಂತ ಕೂಗಿದ. ಆತನ ಧ್ವನಿ ಆ ಪರಿಸರದ ತುಂಬಾ ಪ್ರತಿಧ್ವನಿಸಿತು. ಆ ಕ್ಷಣದಲ್ಲೇ ದಿಗಂತದಂಚಿನಿಂದ ಗೋವುಗಳ ಹಿಂಡಿನೊಂದಿಗೆ ಇವನತ್ತಲೇ ನಡೆದು ಬಂದ ಕೃಷ್ಣ. ಬಿಸಿಲಿಗೆ ಬೆವೆತ ಕೃಷ್ಣನ ಮುಖದ ತುಂಬಾ ಮುತ್ತಿನಂತೆ ಹರಡಿತ್ತು ಬೆವರ ಹನಿ.
“ಏನೋ ಮಾಧು ನನ್ನ ಕರೆದೆಯಲ್ಲ” ಅಂತನ್ನುತ್ತಾ ನಡೆದು ಬಂದ ಕೃಷ್ಣ.
“ಒಬ್ಬನೇ ಆಡುತ್ತಿದ್ದೆ, ಅದಕ್ಕೆ ನಿನ್ನ ಕರೆದೆ”

“ಓಹೋ ಹಾಗಾದರೆ ಜೊತೆಯಲ್ಲಿ ಆಡೋಣ ಬಾ” ಎನ್ನುತ್ತ ತನ್ನ ಗೋವುಗಳ ಹಿಂಡಿನೆಡೆಗೆ ಮಾಧುವನ್ನ ಕರೆದೊಯ್ದ.

ಕೃಷ್ಣನತ್ತಲೇ ದೃಷ್ಟಿ ನೆಟ್ಟು ನಿಂತಿದ್ದ ನೂರಾರು ದನ ಕರುಗಳನ್ನು ನೋಡಿದ ಮಾಧು “ಅದು ಹೇಗೆ ಇಷ್ಟೊಂದು ಗೋವುಗಳನ್ನ ನೀನೊಬ್ಬನೇ ನೋಡಿಕೊಳ್ತೀಯ”? ಅಂತ ಕೇಳಿದ.

“ಇವರೆಲ್ಲಾ ನನ್ನ ಕುಟುಂಬದಂತೆ. ಹಸಿದಾಗ ಇದೇ ಗೋಮಾತೆಯ ಹಾಲನ್ನ ಕುಡಿದು ಬೆಳೆದವ ನಾನು. ಆ ಕ್ಷೀರದಿಂದ ಮಾಡಿದ ಬೆಣ್ಣೆಯನ್ನ ಗಡಿಗೆ ಒಡೆದು ಕದ್ದು ತಿಂದವ ನಾನು. ಇದೇ ಕರುಗಳೊಡನೆ ಆಡಿ ಬೆಳೆದವ ನಾನು. ಹೀಗೆ ನನ್ನದು ಎಂಬ ಈ ದೇಹ ಆ ಗೋಮಾತೆಯ ಫಲ”

“ಹಾಗಾದರೆ ನಾನು ದಿನಾಲೂ ಊಟ ಮಾಡೋದು ಅನ್ನವನ್ನ. ಅದನ್ನೂ ಕೂಡ ಅವಳೇ ಕೊಟ್ಟಿದ್ದು ಅಂತ ಹೇಳ್ತೀಯಾ”? ಅಂತ ಮುಗ್ಧವಾಗಿ ಪ್ರಶ್ನಿಸಿದ ಮಾಧು.
” ಹೌದು ಮಾಧು, ಅಕ್ಕಿಯನ್ನ ಬೆಳೆಯುವ ಈ ಭೂಮಿಯ ಒಡಲನ್ನ ಫಲವತ್ತನ್ನಾಗಿ ಮಾಡುವುದು ಗೋವುಗಳು. ನೆಲವನ್ನ ಉತ್ತು ಅದರೊಳಗಿಂದ ಭತ್ತದ ಚಿಗುರೊಡೆಯುವಂತೆ ಮಾಡುವುದು ಗೋವು”
“ಅದು ಸರಿ ನೀನ್ಯಾಕೆ ಈ ಗೋಪಾಲಕನ ಕೆಲಸ ಮಾಡ್ತಿದ್ದೀಯಾ. ಬೇರೆ ಯಾವುದಾದರು ಧನಲಾಭದ ಕೆಲಸ ಮಾಡಬಹುದಲ್ಲಾ”
” ಅಯ್ಯೋ ಮಾಧು, ಗೋವಿಗಿಂತ ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಮತ್ಯಾವುದೂ ಇಲ್ಲ. ಗೋವಿನ ಪಾಲನೆಗಿಂತ ಪುಣ್ಯ ಕೆಲಸ ಮತ್ತೊಂದಿಲ್ಲ. ಗೋದಾನಕ್ಕಿಂತ ಮಹತ್ತರವಾದುದು ಇನ್ನೊಂದಿಲ್ಲ” ಅಂತ ಮುಗುಳ್ನಗುತ್ತಾ ಉತ್ತರಿಸಿದ ಕೃಷ್ಣ.

  “ಹೌದು ಕೃಷ್ಣ, ನನ್ನಮ್ಮ ಹೇಳುತ್ತಿದ್ದ ಕಾಮಧೇನುವಿನ ಕಥೆ ನನಗೀಗಲೂ ನೆನಪಿದೆ. ಸಜ್ಜನರಿಗೆ ಬಯಸಿದ್ದನ್ನು ನೀಡುವ ಆಕೆ ಎಲ್ಲಾ ದೇವರ ಆವಾಸ ಸ್ಥಾನ ಅಂತ ಅಮ್ಮ ಹೇಳುತ್ತಿದ್ದರು”

” ಗೋವಿನ ದೇಹದ ಪ್ರತಿಯೊಂದು ಅಂಗವೂ ಪರಿಶುದ್ಧವಾಗಿದೆ. ಗೋಕ್ಷೀರ ಈ ಜಗತ್ತಿನಲ್ಲಿ ಅಮೃತ ಸಮಾನವಾಗಿದೆ. ಸಕಲ ದೇವರ ಆವಾಸ ಸ್ಥಾನವಾಗಿದೆ”

ಹೀಗೆ ಪುಟ್ಟ ಮಾಧುವಿಗೆ ಗೆಳೆಯ ಕೃಷ್ಣನೊಡನೆ ಪ್ರಶ್ನೆಗಳನ್ನ ಕೇಳುವುದೆಂದರೆ ಸಂತೋಷದ ಕ್ಷಣವಾಗಿತ್ತು. ಜಗತ್ತಿನ ಸಕಲ ಚರಾಚರ ವಸ್ತುಗಳ ಒಡೆಯ, ಅವನ ಮುಂದೆ ಗೋಪಾಲಕನಾಗಿ ನಿಂತಿದ್ದ.
ಕೃಷ್ಣನೊಡನೆ ಮಾತನಾಡುತ್ತಾ , ಕರುಗಳೊಡನೆ ಆಟವಾಡುತ್ತಾ, ಇಡಿಯ ಜಗತ್ತನ್ನೇ ಮರೆತ ಮಾಧುವಿಗೆ ಮನೆಯಿಂದ ಅಮ್ಮ ಕರೆಯುತ್ತಿದ್ದ ಧ್ವನಿ ಕೇಳಿಸಿತು.
” ಅಮ್ಮ ಕರೆಯುತ್ತಿದ್ದಾರೆ, ನಾನು ಹೋಗಬೇಕು. ನಾಳೆ ಮತ್ತೆ ಆಟವಾಡೋಣ” ಅಂದ ಮಾಧು ಮನೆಯ ಕಡೆ ಓಡಿ ಬಿಟ್ಟ.

” ಎಲ್ಲೋ ಹೋಗಿದ್ದೆ ಇಷ್ಟು ಹೊತ್ತು, ತಗೋ ಹಾಲು ಕುಡಿ” ಅಂತ ಅಮ್ಮ ಹಾಲನ್ನ ಕೊಟ್ಟಾಗ ಮಾಧುವಿನ ಮನದಲ್ಲಿ “ನನ್ನದು ಎಂಬ ಈ ದೇಹ ಆ ಗೋಮಾತೆಯ ಫಲ” ಎಂಬ ಕೃಷ್ಣನ ಮಾತು ಪ್ರತಿಧ್ವನಿಸುತ್ತಿತ್ತು.
ಗೋಪಾಲನ ಜೊತೆಯಲ್ಲಿ...!! Reviewed by Murali Kadava on 20:41:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.